ತುಂಬಿ ತುಳುಕಿದ ತಾಲೂಕಿನ ಕೆರೆ, ಕಟ್ಟೆ, ಚೆಕ್ ಡ್ಯಾಮ್ : ಸಂತೋಷದಲ್ಲಿ ರೈತಾಪಿ ವರ್ಗ
ಸುರೇಶ್ ಅಜ್ಜೀಪುರ ಹನೂರು
ಇತ್ತೀಚಿಗೆ ಸುರಿಯುತ್ತಿರುವ ಮಳೆಯಿಂದಾಗಿ ಒಂದೆಡೆ ಖುಷಿಯಾದರೆ ಮತ್ತೊಂದೆಡೆ ಅನಾಹುತಕ್ಕೆ ಎಡೆ ಮಾಡಿಕೊಡುತ್ತಿದ್ದು, ರೈತರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ತಾಲೂಕಿನ ಉದ್ದಗಲಕ್ಕೂ ಕಳೆದ ವಾರದಿಂದ ಪ್ರತಿದಿನ ಸುರಿಯುತ್ತಿರುವ ಮಳೆಯಿಂದಾಗಿ ಜನ ಜಾನುವಾರುಗಳಿಗೆ ಸಂಕಟ ಸಹ ತಪ್ಪಿದ್ದಲ್ಲ. ಅಂತೆಯೇ ತಾಲೂಕಿನ ಕೆರೆ ಕಟ್ಟೆಗಳು ಚೆಕ್ ಡ್ಯಾಮ್ಗಳು ಸಹ ತುಂಬಿ ತುಳುಕುತ್ತಿದ್ದೂ ರೈತಾಪಿ ವರ್ಗ ಸಂತೋಷ ವ್ಯಕ್ತಪಡಿಸುತ್ತಿದೆ.
ತಂಪೆರೆದ ಮಳೆರಾಯ: ಬಳಲಿ ಬೆಂಡಾಗಿ ನಿಂತು ಬರಡು ಭೂಮಿಯನ್ನು ಒಣಮರವನ್ನು ಗಿಣಿ ಕಾದಂತೆ ಕಾದು ಕುಳಿತಿದ್ದ ರೈತರಿಗೆ ಇತ್ತೀಚಿಗೆ ಸುರಿಯುತ್ತಿರುವ ಮಳೆ ತಂಪೆರೆದು ನಿಟ್ಟುಸಿರು ಬಿಟ್ಟಂತಾಗಿದೆ. ಅಲ್ಲದೇ ಕೃಷಿ ಚಟುವಟಿಕೆ ಸಹ ತಾಲೂಕಿನ ಉದ್ದಗಲಕ್ಕೂ ಗರಿಗೆದರಿದ್ದು ರೈತರು ಎಳ್ಳು ಕಂಬು ಬಿತ್ತನೆಯಲ್ಲಿ ತೊಡಗಿದ್ದಾರೆ. ಖಾಲಿಯಾಗಿದ್ದ ಬೋರ್ ವೆಲ್ ಗಳು ರಿ ಬೋರ್ ಆಗುತ್ತಿದ್ದೆ ಇದ್ದರಿಂದ ರೈತರಲ್ಲಿ ಹರ್ಷ ಉಂಟುಗಿದೆ. ಜತೆಗೆ ಬರಗಾಲದ ಛಾಯೆಯಿಂದ ಹೊರಬಂದು ಜನರು ಲವಲವಿಕೆಯಿಂದ ವ್ಯವಹಾರ ನಡೆಸಲು ಮುಂದಾಗಿದ್ದಾರೆ. ಮಾರ್ಟಳ್ಳಿಯಲ್ಲಿ ದಾಖಲೆಯ ಮಳೆ 48.ಮಿ.ಮೀ ಮಳೆ ಬಿದ್ದರೆ ಸಂದನಪಾಳ್ಯ 45.ಮಿ.ಮೀ ವಡ್ಡರದೊಡ್ಡಿ 52.6.ಮಿ.ಮೀ. ಮಳೆ ಬಿದ್ದಿದ್ದು ಕೆರೆ ಕಟ್ಟೆಗಳು ಚೆಕ್ ಡ್ಯಾಮ್ಗಳು ಭರ್ತಿಯಾಗಿದ್ದು ಕೋಡಿ ಬಿದ್ದಿದೆ.
ಕೆರೆ ಕಟ್ಟೆಗಳು ಭರ್ತಿ ಕೋಡಿ ಬಿದ್ದ ಚೆಕ್ ಡ್ಯಾಮ್: ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ, ಕೊಳ್ಳ, ಕೆರೆ-ಕಟ್ಟೆಗಳು ಭರ್ತಿಯಾಗಿದ್ದು, ಚೆಕ್ ಡ್ಯಾಮ್ ಗಳು ಕೋಡಿ ತುಂಬಿ ಹರಿಯುತ್ತಿದೆ. ಇದರಿಂದ ಅಕ್ಕಪಕ್ಕದಲ್ಲಿರುವ ರೈತರ ಜಮೀನುಗಳಲ್ಲಿರುವ ಬೋರ್ ಸಹ ನೀರು ಒದಗಿದೆ. ಜತೆಗೆ ವನ್ಯಜೀವಿ ಸಮೇತ ಸಾಕು ಪ್ರಾಣಿಗಳಿಗೂ ಸಹ ಮೇವು ಸಿಕ್ಕಿದ್ದು ಕಾಡು ಹಚ್ಚ ಹಸಿರಿಂದ ಕಂಗೊಳಿಸುತ್ತಿದೆ.
ಸಿಡಿಲಿಗೆ ಎಮ್ಮೆ ಬಲಿ: ನೆನ್ನೆ ರಾತ್ರಿ ಸುರಿದ ಗುಡುಗು ಸಿಡಿಲು ಮಳೆಗೆ ಪೊನ್ನಾಚಿ ಸಮೀಪದ ದೊಡ್ಡ ಬೆಟ್ಟ ಗ್ರಾಮದ ಬಸವಣ್ಣ ಅವರ ಸುಮಾರು 40 ಸಾವಿರ ರೂ ಬೆಲೆ ಬಾಳುವ ಗರ್ಭಿಣಿ ಎಮ್ಮೆ ಸಿಡಿಲಿಗೆ ಬಲಿಯಾಗಿದೆ. ರೈತ ಬಸವಣ್ಣನಿಗೆ ದಿಕ್ಕೇ ತೋಚದಂತಾಗಿದೆ. ಕುಟುಂಬದ ಆಧಾರವಾಗಿದ್ದ ಎಮ್ಮೆ ಕಳೆದುಕೊಂಡು ಕಷ್ಟಕ್ಕೆ ಸಿಲುಕಿದ್ದಾರೆ. ಒಮ್ಮೆಲೇ ಸಿಡಿಲಿಗೆ ಎಮ್ಮೆ ಪ್ರಾಣ ತೆತ್ತಿದ್ದು ಉಳಿದಂತೆ ಕೊಟ್ಟಿಗೆಯಲ್ಲಿದ್ದ 3 ಎಮ್ಮೆಗಳಿಗೂ ಗಾಯಗಳಾಗಿದೆ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಇತ್ತ ಗಮನಹರಿಸಿ ಪರಿಹಾರ ನೀಡಬೇಕು ಎಂದು ರೈತ ಬಸವಣ್ಣ ಆಗ್ರಹಿಸಿದ್ದಾರೆ. ಅಲ್ಲದೇ ಕಳೆದ ವಾರದ ಹಿಂದಿನ ದಿನಗಳಲ್ಲಿ ಶ್ಯಾಗ್ಯ ಗ್ರಾಮದಲ್ಲೂ ಸಹ ಸಿಡಿಲಿಗೆ ಎಮ್ಮೆಗಳು, ಹಸುಗಳು ಬಲಿಯಾಗಿದ್ದವು.
ಬೆಳೆ ನಾಶ: ಇತ್ತೀಚಿಗೆ ಸುರಿಯುತ್ತಿರುವ ಬಾರಿ ಗಾಳಿ ಮಳೆಗೆ ಹನೂರು ತಾಲೂಕಿನ ಉದ್ದಗಲಕ್ಕೂ ಬೆಳೆದಿದ್ದ ಬಾಳೆ ಬೆಳೆ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ. ತಾಲೂಕಿನ ಹೂಗ್ಯ ಕೂಡಲೂರು, ಚಿಗತಾ ಪುರ, ಅಜ್ಜೀಪುರ, ಚಿಂಚಳ್ಳಿ, ಬಂಡಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕೈಗೆ ಬಂದಿದ್ದ ಬಾಳೆ ಬೆಳೆ ನಾಶವಾಗಿದ್ದೆ. ಲಕ್ಷಾಂತರ ರೂ ನಷ್ಟವಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ನೇರವಾಗುವ ಮೂಲಕ ಅವರಿಗಾದ ನಷ್ಟ ಭರಿಸಬೇಕಿದೆ. ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಮನೆಗಳಿಗೂ ಹಾನಿ: ಮಳೆ ಕೇವಲ ಬೆಳೆಗೆ ಅಷ್ಟೇ ಹಾನಿ ಮಾಡದೆ, ಜನರು ವಾಸಿಸುವ ಮನೆಗಳಿಗೂ ಸಹ ಹಾನಿಯುಂಟು ಮಾಡಿದೆ. ಗಾಳಿ ಮಳೆಗೆ ದೊಮ್ಮನಗದ್ದೆ ಗ್ರಾಮದಲ್ಲಿ ಹಾಗೂ ದಿನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಂಚಿನ ಮನೆಗಳ ಹೆಂಚುಗಳು ಗಾಳಿಗೆ ತೂರಿದ್ದು ಜನರು ಆತಂಕದಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿತ್ರ: ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ನೆನ್ನೆ ರಾತ್ರಿ ಸಿಡಿಲು ಬಡಿದು ಬಸವಣ್ಣ ಅವರ ಎಮ್ಮೆ ಹಸು ನೀಗಿರುವುದು.
ಚಿತ್ರ: ಹನೂರು ತಾಲೂಕಿನ ಸಂದನಪಾಳ್ಯದಲ್ಲಿ ಚೆಕ್ ಡ್ಯಾಮ್ ಕೋಡಿ ಬಿದ್ದಿರುವುದು.


————————–
ಕೋರ್ಟ್
ಹನೂರು ತಾಲೂಕಿನಲ್ಲಿ ಬಾಳೆ ಬೆಳೆ ಸುಮಾರು 73 ಹೆಕ್ಟರ್ ಪ್ರದೇಶ ಹಾನಿಯಾಗಿದೆ. ಸುಮಾರು 15 ರಿಂದ 16 ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ ಹಸು ಎಮ್ಮೆ ಸಹ ಸಾವನ್ನಪ್ಪಿವೆ. ಇದಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ಸೂಕ್ತ ಕ್ರಮ ಕಗೊಂಡಿದ್ದು, ಸದ್ಯದಲ್ಲೇ ಕ್ರಮ ಪರಿಹಾರ ಕೊಡುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ.
-ವೈ.ಕೆ.ಗುರುಪ್ರಸಾದ್, ತಹಸೀಲ್ದಾರ್, ಹನೂರು ತಾಲೂಕು.

ಇತ್ತೀಚಿಗೆ ಸುರಿಯುತ್ತಿರುವ ಮಳೆಯಿಂದಾಗಿ ಒಂದೆಡೆ ಖುಷಿಯಾದರೆ ಮತ್ತೊಂದೆಡೆ ಸಂಕಷ್ಟ ಎದುರಾಗಿದೆ. ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗೆ, ಮನೆಗಳಿಗೆ ಹಾಗೂ ಅಸುನೀಗಿದ ಎಮ್ಮೆ ಹಸುಗಳಿಗೆ ಸರ್ಕಾರ ತುರ್ತಾಗಿ ಪರಿಹಾರ ನೀಡಬೇಕು. ಆ ಮುಖಾಂತರ ಸರ್ಕಾರ ರೈತರಿಗೆ ನೆರವಾಗಬೇಕು.
– ಸ್ನೇಹಜೀವಿ ರಾಜ್, ಸಾಮಾಜಿಕ ಕಾರ್ಯಕರ್ತ, ಪೊನ್ನಾಚಿ.

