ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿರೀಕ್ಷೆಯನ್ನು ತಲುಪದ ‘ಕೈ’
ಹರ್ಷ ಪಿ ದೇವನಹಳ್ಳಿ
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಿದ್ದ ಮತಕ್ಕಿಂತ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರವಾರು 11,371 ಮತಗಳನ್ನು ಕಾಂಗ್ರೆಸ್ ಹೆಚ್ಚಳ ಮಾಡಿಕೊಂಡಿದೆ.
ವಿಧಾನ ಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ 73,058 ಮತಗಳನ್ನು ಪಡೆಯುವ ಮೂಲಕ ವಿಜಯೋತ್ಸವ ಆಚರಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ರಕ್ಷಾ ರಾಮಯ್ಯರ ಪರ 84,429 ಮತಗಳನ್ನು ಕಾಂಗ್ರೆಸ್ ಸೆಳೆದಿದೆ.
ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ನ ನಿಸರ್ಗ ನಾರಾಯಣಸ್ವಾಮಿ 68,427 ಮತಗಳು ಹಾಗೂ ಬಿಜೆಪಿಯ ಪಿಳ್ಳ ಮುನಿಶಾಮಪ್ಪ 34,404 ಮತಗಳನ್ನು ಪಡೆದಿದ್ದರೂ, ಇವರಿಬ್ಬರಿರು ಪಡೆದಿದ್ದ ಒಟ್ಟು ಮತಗಳು 1,02,231 ಲೆಕ್ಕಾಚಾರವಿದ್ದರೂ, ಈ ಗುರಿಯನ್ನು ಲೋಕಸಭಾ ಚುನಾವಣೆಯಲ್ಲಿ ಮುಟ್ಟಲು ಸಾಧ್ಯವಾಗಿಲ್ಲ.
ರಕ್ಷಾ ರಾಮಯ್ಯರನ್ನು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತ ಕೊಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ರಾಜಕೀಯ ತಂತ್ರಗಾರಿಕೆ ಫಲವಾಗಿ 11,371 ಮತಗಳನ್ನಷ್ಟೇ ದೇವನಹಳ್ಳಿಯಲ್ಲಿ ಪಡೆಯಲು ಸಾಧ್ಯವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೂವರು ಕಾಂಗ್ರೆಸ್ನ ಶಾಸಕರಿದ್ದರೂ ನಿರೀಕ್ಷಿತ ಮಟ್ಟದಲ್ಲಿ ರಕ್ಷಾ ರಾಮಯ್ಯರಿಗೆ ಮತದಾರರು ಬೆಂಬಲಿಸಿದಂತೆ ಕಾಣುತ್ತಿಲ್ಲ.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಪಂಚ ಗ್ಯಾರೆಂಟಿಗಳು ಕೈಹಿಡಿಯಲಿವೆ ಎಂಬ ನಂಬಿಕೆಯಲ್ಲಿದ್ದ ಕಾಂಗ್ರೆಸ್ ಮುಖಂಡರಿಗೆ ಸಮೀಕ್ಷೆಗಳು ತಲೆಕೆಳಗಾಗಿದೆ. ಚುನಾವಣೆ ವೇಳೆಗೆ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಗೃಹ ಲಕ್ಷ್ಮೀ ಹಣವೂ ಬಂದಿದ್ದು, ಮತಗಳಾಗಿ ಪರಿವರ್ತನೆ ಆಗುತ್ತದೆ ಎಂಬ ಮಾತು ಸುಳ್ಳಾಗಿದೆ.
ಆಹಾರ ಸಚಿವ ಕೆ.ಎಚ್.ಮುನಿಯಪ್ಪರ ತವರು ಕ್ಷೇತ್ರ ದೇವನಹಳ್ಳಿಯಲ್ಲಿ ರಾಜಕೀಯ ಲೆಕ್ಕಾಚಾರದ ನಡುವೆಯೂ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರಿಗೆ 5,231 ಮತಗಳ ಮುನ್ನಡೆ ದೊರೆತಿದೆ. ನೆಲಮಂಗಲದಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಬಿಜೆಪಿ ಪಕ್ಷಕ್ಕೆ 33,255 ಮತಗಳು ಮುನ್ನಡೆ ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ.
ಬಾಕ್ಸ್ 1
ಹೊಸಕೋಟೆಯಲ್ಲಿ ಕಾಂಗ್ರೆಸ್ ಮತಗಳು ಕ್ಷೀಣ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹೊಸಕೋಟೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಅವರು, ಪ್ರಬಲ ಪ್ರತಿಸ್ಪರ್ಧಿ ಎಂಟಿಬಿ ನಾಗರಾಜ್ ವಿರುದ್ಧ 5075 ಮತಗಳ ಅಂತರದಿಂದ ವಿಜಯ ಸಾಧಿಸಿದ್ದರೂ, ಅದರೆ ಲೋಕಸಭಾ ಚುನಾವಣೆಯಲ್ಲಿ ಈ ಅಂತರದ ಮತಗಳು ಕಡಿತವಾಗಿದೆ. ಸುಧಾಕರ್ ವಿರುದ್ಧ ರಕ್ಷಾ ರಾಮಯ್ಯರಿಗೆ ಕೇವಲ 2885 ಮತಗಳ ಲೀಡ್ ಮಾತ್ರವೇ ಹೊಸಕೋಟೆಯ ಕಾಂಗ್ರೆಸ್ ಕಲಿಗಳು ನೀಡುವಲ್ಲಿ ಸಫಲರಾಗಿದ್ದಾರೆ.
ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೂ ವಿಧಾನ ಸಭಾ ಚುನಾವಣೆಗಿಂತ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪಕ್ಷ ಸಂಘಟನೆಯಲ್ಲಿ ನಿರತನಾಗುವೆ-
ಕೆ.ಎಚ್.ಮುನಿಯಪ್ಪ, ಆಹಾರ ಸಚಿವ
ಪೋಟೋ
ದೇವನಹಳ್ಳಿಯ ನಾಗಾರ್ಜುನ ಎಂಜಿನಿಯರ್ ಕಾಲೇಜಿನಲ್ಲಿ ನಡೆದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಂತರ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಬೆಂಬಲಿಗರೊಂದಿಗೆ ಸಂಭ್ರಮಾಚರಣೆ ಮಾಡಿದರು.

