ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ಕೇರಳಕ್ಕೆ ಪ್ರಧಾನಿ ನರೇಂದ್ರ ಮೋದಿ ನೆರವಿನ ಹಸ್ತ ಚಾಚಿದ್ದಾರೆ. ಕೇಂದ್ರ ಸರ್ಕಾರದಿಂದ ಕೇರಳಕ್ಕೆ 21,253 ರೂಗಳ ನೆರವಿನ ಪ್ಯಾಕೇಜ್ ಅನ್ನು ನೀಡಲಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವರಾದ ಕೇರಳ ಮೂಲದ ರಾಜೀವ್ ಚಂದ್ರಶೇಖರ್ ಅವರು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದು, ಕೇಂದ್ರದ ಸಹಾಯ ಧನವನ್ನು ಸರಿಯಾಗಿ ವಿನಿಯೋಗಿಸಿ ಎಂದು ಕೇರಳ ಸಿಎಂ ಪಿಣಾರಯಿ ವಿಜಯನ್ ಅವರನ್ನು ಆಗ್ರಹಿಸಿದ್ದಾರೆ.
ಕೇರಳದ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ನೆರವಾಗಿದೆ. 2024ರವರೆಗೆ 21,253 ಕೋಟಿ ರೂಗಳವರೆಗೆ ಸಾಲಗಳನ್ನು ಸರ್ಕಾರ ಮಂಜೂರು ಮಾಡಿದೆ. ಈ ಹಣವನ್ನು ಯಾವ ಭ್ರಷ್ಟಾಚಾರ, ಸೋರಿಕೆ ಇಲ್ಲದೇ ಕೇರಳ ಜನರ ಕಲ್ಯಾಣಕ್ಕೆ ಸರಿಯಾಗಿ ವಿನಿಯೋಗಿಸಬೇಕು ಎಂದು ಸಿಎಂ ಪಿಣಾರಯಿ ವಿಜಯನ್ ಅವರನ್ನು ಆಗ್ರಹಿಸುತ್ತೇನೆ ಎಂದು ರಾಜೀವ್ ಚಂದ್ರಶೇಖರ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಫಂಡ್ಗಳನ್ನು ಉಪಯೋಗಿಸಿ ಈ ಕೆಲಸ ಮಾಡಿ: ರಾಜೀವ್
- ಕೇರಳ ಸಾರಿಗೆ ಸಂಸ್ಥೆಯ ಉದ್ಯೋಗಿಗಳು ಸೇರಿದಂತೆ ಇಲ್ಲಿನ ಸರ್ಕಾರಿ ನೌಕರರಿಗೆ ತಿಂಗಳುಗಳಿಂದ ಸರಿಯಾಗಿ ಸಂಬಳ ಆಗಿಲ್ಲ. ಇವರಿಗೆ ಸಂಬಳ ಮತ್ತು ಪಿಂಚಣಿ ಒದಗಿಸಿ.
- ಕರಾವಳಿ ರಕ್ಷಣೆ ಮತ್ತು ಮಿನಿ ಹಾರ್ಬರ್ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸಿ
- ಸಿಪಿಒ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ
- ತಿರುವನಂತಪುರಂನಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ.
ಹೀಗೆಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಒತ್ತಾಯಿಸಿದ್ದಾರೆ.
ತಿರುವನಂತಪುರಂ ನಗರದಲ್ಲಿ ಪ್ರವಾಹ ನಿಯಂತ್ರಣ ವ್ಯವಸ್ಥೆ ನಿರ್ಮಿಸಲು 200 ಕೋಟಿ ರೂ ಯೋಜನೆಗೆ ಕೇಂದ್ರ ಸರ್ಕಾರ ನೆರವು ನೀಡುತ್ತಿದೆ. ಈ ಯೋಜನೆಯ ಪ್ರಸ್ತಾವ ಸಲ್ಲಿಸಲು ಮೇ 31 ಕೊನೆಯ ದಿನ. ಅಷ್ಟರೊಳಗೆ ಕೇರಳ ಸರ್ಕಾರ ಪ್ರಸ್ತಾಪ ಸಲ್ಲಿಸಲಿ ಎಂದು ಮತ್ತೊಂದು ಎಕ್ಸ್ ಪೋಸ್ಟ್ನಲ್ಲಿ ಕೇಂದ್ರ ಸಚಿವರು ಒತ್ತಾಯಿಸಿದ್ದಾರೆ.
ನಮ್ಮ ತೆರಿಗೆ ಪಾಲು ನಮಗೆ ಕೊಡಿ ಎನ್ನುತ್ತಿರುವ ಕೇರಳ ಸರ್ಕಾರ
ಕರ್ನಾಟಕ, ತಮಿಳುನಾಡು ಸರ್ಕಾರಗಳಂತೆ ಕೇರಳ ಸರ್ಕಾರ ಕೂಡ ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ನೀತಿ ಬಗ್ಗೆ ಅಸಮಾಧಾನಗೊಂಡಿದೆ. ಕೇರಳದಿಂದ ಕೇಂದ್ರ ಸರ್ಕಾರಕ್ಕೆ ಹೋಗುತ್ತಿರುವ ಹಣ 11 ಪಟ್ಟು ಹೆಚ್ಚಾಗಿದೆ. ಅದಕ್ಕೆ ಬದಲಾಗಿ ತೆರಿಗೆ ಪಾಲು 8.8 ಪಟ್ಟು ಮಾತ್ರವೇ ಹೆಚ್ಚಾಗಿದೆ ಎಂದು ಕೇರಳ ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ತಗಾದೆ ತೆಗೆದಿದ್ದಾರೆ.
ಕೇರಳದಲ್ಲಿ ಸಾಮಾಜಿಕ ಯೋಜನೆಗಳಿಗೆ ವೆಚ್ಚ ಭರಿಸಲು ಹಣದ ಕೊರತೆ ಇದೆ. ಕನಿಷ್ಠ ಅಗತ್ಯತೆಯ ಸೇವೆ ಕೊಡಲೂ ಆಗುತ್ತಿಲ್ಲ. 62 ಲಕ್ಷ ಕುಟುಂಬಗಳಿಗೆ ಪಿಂಚಣಿ ಕೊಡಲು ದುಡ್ಡಿಲ್ಲ. ಕೇಂದ್ರ ಸರ್ಕಾರದಿಂದ ನಮ್ಮ ಪಾಲಿನ ಹಣ ಬರುತ್ತಿಲ್ಲದಿರುವುದು ಈ ಕಷ್ಟಕ್ಕೆ ಕಾರಣವಾಗಿದೆ ಎಂದು ಬಾಲಗೋಪಾಲ್ ಹೇಳಿದ್ದಾರೆ.
