ರಾಜ್ಯದಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ರಾಜ್ಯ ಸರ್ಕಾರವು ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ-2023 ಮಂಡಿಸಲು ತೀರ್ಮಾನಿಸಿದ್ದು, ಇದರಡಿ ಪರೀಕ್ಷಾ ಅಕ್ರಮ ಎಸಗಿದವರಿಗೆ 10 ಕೋಟಿ ರು.ವರೆಗೆ ದಂಡ, 12 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಅಕ್ರಮ ಆಸ್ತಿ ಜಪ್ತಿಯಂತಹ ಕಠಿಣ ನಿಯಮಗಳನ್ನು ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ.
ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ, ಎಂಜಿನಿಯರ್ಗಳ ನೇಮಕಾತಿ, ನಿಗಮ-ಮಂಡಳಿಗಳ ಎಫ್ಡಿಎ ನೇಮಕಾತಿ ಅಕ್ರಮ ಸೇರಿದಂತೆ ಸಾಲು-ಸಾಲು ನೇಮಕಾತಿ ಪರೀಕ್ಷಾ ಅಕ್ರಮಗಳು ನಡೆಯುತ್ತಿವೆ. ಇದರಿಂದ ಅರ್ಹರು ಅವಕಾಶ ವಂಚಿತರಾಗುತ್ತಿದ್ದು, ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರು ಕಠಿಣ ಶಿಕ್ಷೆ ಇಲ್ಲದೆ ಪಾರಾಗುತ್ತಿದ್ದಾರೆ. ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವೂ ಪರೀಕ್ಷಾ ಅಕ್ರಮದ ವಾಸನೆ ಬಂದಿರುವುದು ಸರ್ಕಾರದ ನಿದ್ದೆಗೆಡಿಸಿದೆ.
ಈ ಹಿನ್ನೆಲೆಯಲ್ಲಿ ಒಳಾಡಳಿತ ಇಲಾಖೆಯು ಪ್ರತ್ಯೇಕ ಬಿಲ್ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿದೆ.
ಕಾಯ್ದೆಯಲ್ಲಿನ ಕಠಿಣ ನಿಯಮಗಳು:
- ಜಾಹೀರಾತು -
ಒಂದು ವೇಳೆ ಪರೀಕ್ಷಾರ್ಥಿ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿ ಅಕ್ರಮದಲ್ಲಿ ಭಾಗಿಯಾಗಿರುವುದು ದೃಢಪಟ್ಟರೆ ಅಪರಾಧಿಗೆ ಗರಿಷ್ಠ ಐದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವುದು. ಜತೆಗೆ 10 ಲಕ್ಷ ರು.ಗೆ ಕಡಿಮೆ ಇಲ್ಲದಂತೆ ದಂಡ ಹಾಗೂ ದಂಡ ಕಟ್ಟಲು ವಿಫಲನಾದರೆ 9 ತಿಂಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ.
ಒಂದು ವೇಳೆ ಮೂರನೇ ವ್ಯಕ್ತಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಚು ರೂಪಿಸಿದರೆ ಅಥವಾ ಅಕ್ರಮದಲ್ಲಿ ಭಾಗಿಯಾದರೆ ಆತನಿಗೆ 8 ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಗರಿಷ್ಠ 12 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ಸೇರಿಸಲಾಗಿದೆ. ಜತೆಗೆ 15 ಲಕ್ಷ ರು. ಗೆ ಕಡಿಮೆ ಇಲ್ಲದಂತೆ ಗರಿಷ್ಠ 10 ಕೋಟಿ ರು.ವರೆಗೆ ದಂಡ ವಿಧಿಸಲಾಗುತ್ತದೆ. ದಂಡ ಕಟ್ಟಲು ವಿಫಲನಾದರೆ ಎರಡು ವರ್ಷವರೆಗೆ ಜೈಲುವಾಸ ಅನುಭವಿಸಬೇಕು ಎಂದು ಪ್ರಸ್ತಾವಿತ ನಿಯಮಗಳಲ್ಲಿ ತಿಳಿಸಲಾಗಿದೆ.
ತಪ್ಪಿತಸ್ಥನ ಆಸ್ತಿ ಮುಟ್ಟುಗೋಲು:
ಪ್ರಮುಖವಾಗಿ ತಪ್ಪಿತಸ್ಥ ಅಕ್ರಮದಿಂದ ಗಳಿಸಿದ ಸ್ಥಿರ ಅಥವಾ ಚರ ಆಸ್ತಿಯನ್ನು ಮುಟ್ಟುಗೋಲು ಹಾಕುವ ಅಧಿಕಾರವನ್ನು ನೀಡಲಾಗಿದೆ. ರಾಜ್ಯ ಸರ್ಕಾರದ ಪೂರ್ವಾನುಮತಿಯೊಂದಿಗೆ ತಪ್ಪಿತಸ್ಥನ ಆಸ್ತಿ ಮುಟ್ಟುಗೋಲು ಹಾಕಬಹುದು. ಒಂದು ವೇಳೆ ಆಸ್ತಿ ಮುಟ್ಟುಗೋಲು ಕಷ್ಟವಾದರೆ ಅದನ್ನು ಜಪ್ತಿ ಮಾಡಿ, ಆಸ್ತಿ ವರ್ಗಾವಣೆ ಮಾಡದಂತೆ ಆದೇಶ ಹೊರಡಿಸುವ ಅಧಿಕಾರವನ್ನು ತನಿಖಾಧಿಕಾರಿಗೆ ನೀಡಲಾಗಿದೆ.
ತನಿಖಾಧಿಕಾರಿ ಆಸ್ತಿ ಮುಟ್ಟುಗೋಲು ಅಥವಾ ಜಪ್ತಿ ಮಾಡಿದ ಬಗ್ಗೆ 48 ತಾಸಿನೊಳಗೆ ನಿಯೋಜಿತ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ನ್ಯಾಯಾಲಯಕ್ಕೆ ಆಸ್ತಿ ಮುಟ್ಟುಗೋಲು ತೆರವು ಅಥವಾ ದೃಢಪಡಿಸುವ ಅಧಿಕಾರ ಇರಲಿದೆ. ಆರೋಪಿ ತಪ್ಪಿತಸ್ಥ ಎಂದು ದೃಢಪಟ್ಟರೆ, ನ್ಯಾಯಾಲಯ ಶಿಕ್ಷೆಯ ಜೊತೆಗೆ ಸ್ಥಿರ ಹಾಗೂ ಚರ ಆಸ್ತಿ ರಾಜ್ಯ ಸರ್ಕಾರದ ಅಧೀನದಲ್ಲೇ ಇರಿಸಿ ತೀರ್ಪು ನೀಡಬಹುದಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.
ಜಾಮೀನು ರಹಿತ ಅಪರಾಧ:
ಉದ್ದೇಶಿತ ಕಾಯ್ದೆಯಲ್ಲಿ ಅಕ್ರಮ ಎಸಗಿದರೆ ಜಾಮೀನು ರಹಿತ ಅಪರಾಧವಾಗಲಿದೆ. ನೇಮಕಾತಿ ಪರೀಕ್ಷೆ ಅಕ್ರಮವನ್ನು ಗಂಭೀರ ಸ್ವರೂಪದ ಪ್ರಕರಣ ಎಂದು ಪರಿಗಣಿಸಲಾಗುವುದು. ಜತೆಗೆ ಇದನ್ನು ಸಂಯೋಜಿತವಲ್ಲದ ಪ್ರಕರಣವೆಂದು ಪರಿಗಣಿಸಲಾಗುವುದು.
ಇನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕನಿಗಿಂತ ಕೆಳ ದರ್ಜೆಯ ಅಧಿಕಾರಿ ಈ ಪ್ರಕರಣವನ್ನು ತನಿಖೆ ಮಾಡುವ ಹಾಗಿಲ್ಲ. ಪ್ರಕರಣದ ವಿಚಾರಣೆಯನ್ನು ಪ್ರತ್ಯೇಕ ನ್ಯಾಯಾಲಯದಲ್ಲಿ ಮಾಡಲಾಗುವುದು. ರಾಜ್ಯ ಸರ್ಕಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಮಾಲೋಚಿಸಿ ಎಷ್ಟು ಬೇಕಾದರೂ ಸೆಷನ್ ಕೋರ್ಟ್ಗಳನ್ನು ಈ ಪ್ರಕರಣಗಳ ವಿಚಾರಣೆಗಾಗಿ ನಿಯೋಜಿಸಬಹುದಾಗಿದೆ.
ತಪ್ಪಿತಸ್ಥ ಪರೀಕ್ಷಾರ್ಥಿ ಡಿಬಾರ್ :
ಪರೀಕ್ಷಾರ್ಥಿ ಒಂದು ವೇಳೆ ತಪ್ಪಿತಸ್ಥ ಎಂದು ದೃಢಪಟ್ಟರೆ ಆತನನ್ನು ಮುಂದಿನ ಎರಡು ವರ್ಷ ಯಾವುದೇ ನೇಮಕಾತಿ ಪರೀಕ್ಷೆಗಳಿಂದ ಡಿಬಾರ್ ಆಗಲಿದ್ದಾನೆ. ನೇಮಕಾತಿ ಪರೀಕ್ಷೆಗೆ ಸಂಬಂಧ ಪಡದ ಯಾವುದೇ ವ್ಯಕ್ತಿ ಪರೀಕ್ಷಾ ಕೇಂದ್ರದ ಆವರಣದ ಪ್ರವೇಶಕ್ಕೆ ಅನುಮತಿ ನಿಷೇಧಿಸಲಾಗುತ್ತದೆ.
ಈ ಕಾಯ್ದೆಯಡಿ ಯಾವುದೇ ಆಡಳಿತ ಮಂಡಳಿ, ಸಂಸ್ಥೆಗಳ ಗಮನಕ್ಕೆ ಅಕ್ರಮ ನಡೆದಿರುವುದು ಗೊತ್ತಾಗಿದ್ದರೆ ಅಥವಾ ಅಕ್ರಮದಲ್ಲಿ ಭಾಗಿಯಾಗಿದ್ದರೆ, ಅಂಥ ಸಂಸ್ಥೆಗಳ ನಿರ್ದೇಶಕ, ಕಾರ್ಯದರ್ಶಿ, ಪಾಲುದಾರ, ಮ್ಯಾನೇಜರ್ ವಿರುದ್ಧವೂ ನಿಯಮದಂತೆ ಕಠಿಣ ಶಿಕ್ಷೆಗೊಳಗಾಗಲಿವೆ. ಸಂಚು ನಡೆಸಿದ ಆಡಳಿತ ಮಂಡಳಿ, ಸಂಸ್ಥೆಗಳಿಂದ ಪರೀಕ್ಷೆಯ ಒಟ್ಟು ವೆಚ್ಚವನ್ನು ವಸೂಲಿ ಮಾಡಬೇಕು ಮತ್ತು ಅದಕ್ಕೆ ಆಜೀವ ನಿಷೇಧ ಹೇರುವ ಅಂಶವನ್ನು ವಿಧೇಯಕದಲ್ಲಿ ಸೇರಿಸಲಾಗಿದೆ.